(ಮೊನ್ನೆ ಮಧ್ವ ನವಮಿ ನಿಮಿತ್ತ ನನ್ನಪ್ಪ ಸುಮಧ್ವ ವಿಜಯದ ಶ್ಲೋಕವನ್ನೂ, ಜೊತೆಗೆ ಗೋಪಾಲದಾಸರು ಅಷ್ಟ ಭಾವ ಪುಷ್ಪಗಳ ಬಗ್ಗೆ ರಚಿಸಿದ ಸುಳಾದಿಯನ್ನೂ ಟೈಪಿಸಿ ಕಳಿಸಿದ್ದರು. ಅವೆರಡನ್ನೂ ಓದಿ, ಅವುಗಳ ಸುತ್ತಲೇ ತಿರುಗಿದ ವಿಚಾರಗಳ ಕುರಿತು ಈ ಪೋಸ್ಟು)
ಮಧ್ವಾಚಾರ್ಯರ ಜೀವನ ಚರಿತ್ರೆಯನ್ನು ಕಟ್ಟಿ ಕೊಡುವ ಬಹು ಮುಖ್ಯ ಕೃತಿ, ಅವರ ನೇರ ಶಿಷ್ಯ ತ್ರಿವಿಕ್ರಮ ಪಂಡಿತಾಚಾರ್ಯರ ಮಗ, ನಾರಾಯಣ ಪಂಡಿತಾಚಾರ್ಯರ ಸುಮಧ್ವ ವಿಜಯ. ಅದರ ಒಂದು ಸಂಧಿಯಲ್ಲಿ ಮಧ್ವಾಚಾರ್ಯರು ಪೂಜೆಯನ್ನು ಮಾಡುವ ಪರಿಯನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ. ಬಗೆ ಬಗೆಯ ಹೂವುಗಳಿಂದ ದೇವರನ್ನು ಪೂಜಿಸುವುದನ್ನ ವಿವರಿಸುತ್ತಾರೆ. ಮುಂದುವರೆದು, ಆಚಾರ್ಯರು ಬರೀ ಬಾಹ್ಯದಲ್ಲಿ ಮಾತ್ರ ಹೀಗೆ ಹೂವುಗಳಿಂದ ಪೂಜಿಸುವದಲ್ಲದೇ ಅಂತರಂಗದಲ್ಲೂ ದೇವನನ್ನು ಅಷ್ಟ ಭಾವ ಪುಷ್ಪಗಳಿಂದ ಪೂಜಿಸುತ್ತಾರಲ್ಲವೇ ಎಂದು ಬೆರಗು ಮೂಡಿಸುತ್ತಾರೆ.
ತಮರುಣಿ-ಮಣಿ-ವರ್ಣಂ ದಿವ್ಯ-ದೇಹಾಖ್ಯ-ಗೇಹೇ
ಸ್ನಪಿತಮತಿ-ಪೃಥು-ಶ್ರದ್ಧಾ-ನದೀ=ಚಿತ್ತ-ವಾರ್ಭಿಹಿ|
ನನು ಸ ಯಜತಿ ನಿತ್ಯಂ ಹೃತ್-ಸರೋಜಾಸನ-ಸ್ಥಂ
ನ ತು ಸಕ್ರುದಿತಿ ಪುಶ್ಪೈರಷ್ಟಭಿರ್ಭಾವ-ಪುಷ್ಪೈಹಿ ||೩೭||
- ಶ್ರೀ ಮಧ್ವ ವಿಜಯ. ೧೪ ನೇ ಸರ್ಗ.ಪದ್ಮರಾಗದ ನಸುಕೆಂಬಣ್ಣದ ಭಗವಂತನನ್ನು, ದಿವ್ಯದೇಹವೆಂಬ ಮನೆಯಲ್ಲಿ ಹೃದಯ ಕಮಲದ ಪೀಠದಲ್ಲಿ ನೆಲೆಸಿದವನನ್ನು ಮೀಯಿಸುತ್ತ, ವಿಶಾಲವಾಗಿ ಹರಿವ ನಂಬಿಕೆಯ ನದಿಯಲ್ಲಿ ತುಂಬಿದ ಚಿತ್ತವೆಂಬ ನೀರಿನಿಂದ ಪೂಜಿಸುತ್ತಾರಲ್ಲವೆ ಅವರು ನಿತ್ಯವೂ ಎಂಟು ಬಗೆಯ ಭಾವಪುಷ್ಪಗಳಿಂದ, ಬರಿದೆ ಒಮ್ಮೆ ಈ ಹೂವುಗಳಿಂದಷ್ಟೆ ಅಲ್ಲ.
(ಈ ಶ್ಲೋಕದ ಅರ್ಥವನ್ನ ಬಹುಷಃ ಬನ್ನಂಜೆ ಗೋವಿಂದಾಚಾರ್ಯರ ಶ್ರೀ ಮಧ್ವ ವಿಜಯ ಸಂಗ್ರಹದಿಂದ ತೆಗೆದುಕೊಂಡದ್ದು ಅನಿಸುತ್ತದೆ)
ವ್ಯಾಸನಕೆರೆ ಪ್ರಭಂಜನಾಚಾರ್ಯರ ಅರ್ಥ ಸಹಿತ ಸಂಗ್ರಹದ ಸುಮಧ್ವವಿಜಯ ಪುಸ್ತಕದಲ್ಲಿ ಈ ಶ್ಲೋಕದ ಅಡಿ ಟಿಪ್ಪಣಿಯಲ್ಲಿ ಅಷ್ಟ ಭಾವ ಪುಷ್ಪಗಳನ್ನು ತಿಳಿಸುವ ಈ ಕೆಳಗಿನ ಶ್ಲೋಕವನ್ನು ಕೊಟ್ಟಿದ್ದಾರೆ.
ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಂ
ಸರ್ವಭೂತ ದಯಾ ಪುಷ್ಪಂ ಕ್ಷಮಾಪುಷ್ಪಂ ವಿಶಿಷ್ಯತೇ
ಜ್ಞಾನ ಪುಷ್ಪಂ ತಪಃ ಪುಷ್ಪಂ ಧ್ಯಾನ ಪುಷ್ಪಂ ತು ಸಪ್ತಮಂ
ಸತ್ಯಂ ಚೈವಾಷ್ಟಮಂ ಪುಷ್ಪಮೇಭಿಸ್ತುಷ್ಯತಿ ಕೇಶವ(ಅಹಿಂಸೆ, ಇಂದ್ರಿಯ ನಿಗ್ರಹ, ಸರ್ವಭೂತ ದಯಾ, ಕ್ಷಮೆ, ಜ್ಞಾನ, ತಪ, ಧ್ಯಾನ ಮತ್ತು ಸತ್ಯ ಗಳೇ ಎಂಟು ಭಾವ ಪುಷ್ಪಗಳು. ಕೇಶವನು ಇವುಗಳಿಂದ ಅರ್ಚಿಸುವದರಿಂದ ಸಂತುಷ್ಟನಾಗುತ್ತಾನೆ)
ಈ ಎಂಟು ಪುಷ್ಪಗಳ ಕುರಿತು ಗೋಪಾಲದಾಸರು ಸುಳಾದಿಯನ್ನು ರಚಿಸಿದ್ದಾರೆಂದು ತಿಳಿದದ್ದು ಅಪ್ಪ ಇದನ್ನು ಟೈಪಿಸಿ ಈ ಮೇಲಿನಲ್ಲಿ ಕಳಿಸಿದಾಗಲೇ.
ಧ್ರುವ ತಾಳ
ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ
ಭಾವನೆಯನು ಕೇಳಿ ಭಕ್ತಜನರು
ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ
ದೇವನಲ್ಲೇವೆ ಇಂಥ ಗುಣಗಳುಂಟು
ಭಾವಾಷ್ಟ ಪುಷ್ಪ ಗುಣವ ದೇವನಲ್ಲಿಪ್ಪವೆಂದು
ಜೀವ ತಿಳಿದರೆ ಉದ್ಧಾರ ಉಂಟು
ಜೀವರೆಂಬುವರು ಕರ್ಮ ಬದ್ಧರು ಇನ್ನು
ದೇವನು ಕರ್ಮ ತ್ರಿಗುಣಾದಿ ರಹಿತ
ಜೀವರಿಂದಲಿ ಅತ್ಯಂತ ಭೇದ ಸಾಕಾರ ಹರಿ
ಯಾವತ್ತರಾದಿ ವ್ಯಾಪ್ತ ಎಣಿ ಇಲ್ಲದ ಮೂರ್ತಿ
ಪಾವನಾಂಗ ಪಾಪನಾಶ ನಿತ್ಯತೃಪ್ತಾ
ಜೀವದಿ ಜಡದಿ ಎಂದಿಗೆ ಅಗಲದೆ ಇಪ್ಪ
ಈ ವಿಧ ಶಕುತಿಯ ಈಶ ಗೋಪಾಲವಿಟ್ಠಲ
ದೇವರಿಗುಂಟೆಂದು ಅರಿವ ಜೀವನೆ ಬಲುಧನ್ಯ ||೧||ಮಠ್ಯ ತಾಳ
ಬೊಮ್ಮಾಂಡವ ಸೃಜಿಸಿ ಬೊಮ್ಮನೊಳಗೆ ನಿಂತು
ಸುಮ್ಮನಸರನೆಲ್ಲ ನಿರ್ಮಿಸಿ ಪಾಲಿಸಿ
ಬೊಮ್ಮಾಂಡ ಅಳಿಸಿ ಬೊಮ್ಮನ ಕೊಲ್ಲುವ
ಬೊಮ್ಮಹತ್ತಿ ದೋಷವು ಎಮ್ಮಯ್ಯಗಿಲ್ಲ
ಹಮ್ಮಿನ ಹಂಸಡಿಬಿಕರ್ಯಲ್ಲಾರಾ
ನಿರ್ಮಳದಿ ಕೊಂದ ನಿರ್ಮತ್ಸರದಿಂದ
ಧರ್ಮದಿ ಈ ಪುಷ್ಪ ನಮ್ಮಯ್ಯಗೆಂದು
ಘಮ್ಮನೆ ಅರ್ಪಿಸು ಘನ ಭಕುತಿಯಲ್ಲಿ
ರಮ್ಮೆರಮಣನೆ ಗೋಪಾಲವಿಟ್ಠಲ ಪರ
ಬೊಮ್ಮ ಒಲಿವ ಹೀಗೆ ಧರ್ಮ ಅರಿದವರಿಗೆ ||೨||ರೂಪಕ ತಾಳ
ಎರಡೆಂಟು ಸಾಸಿರ ಅರಸಿಯರ ಕೂಡ
ಪರಿ ಪರಿ ಕ್ರೀಡಿಯ ಮಾಡಿ ನೋಡಿ ಚಲ್ವ
ತರುಳ ತನದಿ ಹನ್ನೆರಡು ಸಾಸಿರಮಂದಿ
ತರುಳರ ಪಡೆದು ತಾ ಪರೀಕ್ಷಿತನಿಗೆ ಇನ್ನು
ಪರಿಣಾಮ ಮಾಡಿದವರ ಬ್ರಹ್ಮಚಾರಿ ಎಂದು
ಸರಿ ಹೋಗುವದೇ ಇಂಥ ಚರಿಯ ಮನುಜರಿಂದ
ಹರಿಗೆ ಇಂದ್ರಿಯನಿಗ್ರಹ ಸ್ಥಿರ ಪುಷ್ಪವೆಂತೆಂದು
ಅರಿದು ಅರ್ಪಿಸುವ ಜೀವರಿಗೆ ಲೇಪಿಸದು
ಪರಮದಯಾಳು ಗೋಪಾಲವಿಠ್ಠಲ ತನ್ನ
ಆರಿದಂತೆ ಫಲವೀವಾ ಶರಣರ ಜನಕೆ ||೩||ಝಂಪೆ ತಾಳ
ಭೂತದಯಾಪುಷ್ಪ ಭೂತೇಶಗಲ್ಲದೆ
ಭೂತಾಧಾರದಿ ಇಪ್ಪ ಭೂತರಿಗೆ ಥರವೇ
ನೀತಿಲಿ ತ್ರಿವಿಧ ಜೀವರಿಗೆ ತಾ ತಪ್ಪದೆ
ಪ್ರೀತಿಲಿ ಉಣಿಸಿ ಅಜಾತನಾಗಿ ಇಪ್ಪ
ಮಾತು ಮಾತಿಗೆ ಅನಂತ ಕರ್ಮಂಗಳು
ಜ್ಞಾತವಿಲ್ಲದೆ ಮಾಳ್ಪ ಜೀವರಿಗೆ ಇದು ಸಲ್ಲ
ಭೂತರುಗಳ ಗತಿ ತಾ ತಿಳಿದು ತ್ರಿವಿಧರಿಗೆ
ನೋತಫಲವಿತ್ತು ಸಮನಾಗಿ ಇಪ್ಪುವನೆಂದು
ಈ ತೆರದಿ ತಿಳಿದು ನೀ ಭೂತದಯಾ ಪುಷ್ಪ
ಪ್ರೀತಿಯಲಿ ಅರ್ಪಿಸನ್ಯಥಾ ಚಿಂತಿಸದೆ
ದಾತ ನಮ್ಮ ಸ್ವಾಮೀ ಗೋಪಾಲವಿಟ್ಠಲ
ಸೋತೆನೆಂದ ಬಳಿಕ ಸಲಹದೆ ಬಿಡನು ||೪||ತ್ರಿಪುಟ ತಾಳ
ಸರ್ವದಾ ಕ್ಷಮೆ ಪುಷ್ಪ ಸರ್ವೆಶಗಲ್ಲದೆ
ಗರ್ವ ತತ್ವದಿ ಬದ್ಧ ಜೀವರಿಗೆ ಸಲ್ಲ
ಶರ್ವನಲ್ಯಾದರು ಸಹಿಸಿಲ್ಲ ಈ ಕರ್ಮ
ಪೂರ್ವದ ಆಖ್ಯಾನ ಇದಕುಂಟು
ಸರ್ವ ಉತ್ತಮ ದೇವನಾರೆಂದು ಭೃಗು ಮುನಿ
ಸರ್ವಪೂರ್ಣ ಹರಿಯ ಎದಿಯ ವದ್ದ
ಪರ್ವತದೋಪಾದಿ ಇದ್ದ ಕಾರಣವಾಗಿ
ಸರ್ವೋತ್ತಮನೆಂದು ತುತಿಸಿ ನಲಿದಾ
ನಿರ್ವ್ಯಾಜದಿಂದಲಿ ನಿತ್ಯ ಕೋಪದಿ ಖೇದ
ಗರ್ವ ತತ್ವದಿ ಬದ್ಧ ಜನರಿಗೆ ಕೂಡದು
ಸರ್ವಾನಂದ ಪೂರ್ಣ ಗೋಪಾಲವಿಠಲ
ಸರ್ವೇಶಗೀ ಪುಷ್ಪ ಅರಿವ ಜೀವನೆ ಧನ್ಯ ||೫||ಅಟ್ಟ ತಾಳ
ದಮ ಜ್ಞಾನ ಧ್ಯಾನವು ಸಮೀಚೀನ ಪುಷ್ಪವು
ರಮೆ ಈಶಗಲ್ಲದೆ ಶ್ರಮಿಸೋ ಜೀವರಿಗಿಲ್ಲಾ
ವಮನ ಕಂಡರೆ ಅಂಜೋ ಭ್ರಮಣ ಜೀವರಿಗೆ
ದಮ ಎಂಬ ಪುಷ್ಪವು ಎಂತು ದೊರೆಯುವದಯ್ಯಾ
ಮಮತಿ ಜಡದಿ ನಿಮಿಷ ಬಿಡದೆ ಇದ್ದ
ಹಮ್ಮತಿ ಜೀವನಿಗೆ ಜ್ಞಾನಪುಷ್ಪವು ಎಂತೋ
ಕ್ಷಮಿಸಿ ನೋಡಲು ಧ್ಯಾನಪುಷ್ಪ ವೆಂಬೋದು ಅಂತು
ನಿಮಿತ್ತ ಮಾತ್ರವು ಇದು ನೀಚ ಜೀವರಗಿಲ್ಲ
ಸಮ್ಮತಿಸಿ ನೋಡಿವು ಸರ್ವೋತ್ತಮನಲ್ಲವೇ
ನಿಮಿಷ ಬಿಡದೆ ಇಪ್ಪವೆಂದು ಚಿಂತನೆ ಮಾಡೆ
ದಮಜ್ಞಾನ ಧ್ಯಾನವುಳವನಾಗುವನಾ ಜೀವ
ಸುಮನಸರೊಡಿಯ ಗೋಪಾಲವಿಟ್ಠಲನು
ನಮಿಸಿ ನೆಚ್ಚಿದಂಗಿನ್ನರಿಸುವನಿದಿರಾ ||೬||ಆದಿ ತಾಳ
ಸತ್ಯವೆಂಬುವ ಪುಷ್ಪ ಸರ್ವೆಶಗೆ ಇದು
ನಿತ್ಯ ಅನೃತ ನುಡಿವ ಜೀವಗೆ ಸಲ್ಲ
ಕತ್ತಲೆ ಒಳಗಿದ್ದ ಮತ್ತೆ ಉದಯವೆಂಬೋ
ಮಿಥ್ಯ ವಚನವಾಡಿ ಸುತ್ತುವ ಸಂಸಾರ
ಮತ್ತೆ ಇವಗೀ ಪುಷ್ಪ ಎಂತು ದೊರುವದಯ್ಯಾ
ಸತ್ಯ ಸಂಕಲ್ಪ ನಮ್ಮ ಗೋಪಾಲವಿಠ್ಠಲಗೆ
ಮತ್ತೆ ನೀ ಉಂಟೆಂದು ಮನಮುಟ್ಟಿ ತಿಳಿಯೋ ||೭||ಜತೆ
ಭೇದವಿಲ್ಲದೀ ಪುಷ್ಪ ಇಪ್ಪವು ಹರಿಯಲ್ಲಿ
ಸಾಧಿಸರ್ಚಿಸು ಗೋಪಾಲವಿಟ್ಠಲ ಒಲಿವಾ ||೮||
ಈ ಭಾವಾಷ್ಟ ಪುಷ್ಪಗಳು ಅಂದರೆ ಅವು ಸಾರ್ವಕಾಲಿಕ ಸತ್ಯಗಳು ಅಥವಾ ಅವು ಪ್ರಿನ್ಸಿಪಲ್ಲುಗಳು ಅಂತ ವೈದ್ಯರು ಹೇಳುತ್ತಿರುತ್ತಾರೆ. ಈ ಅಷ್ಟ ಪುಷ್ಪಗಳು ನಮ್ಮ ಭಾವದಲ್ಲಿ ಅರಳಬೇಕು, ಅವನ್ನು ಅವನಿಗೇ ಸಮರ್ಪಿಸಬೇಕು ಎನ್ನುವದು ಇಲ್ಲಿಯವರೆಗೆ ತಿಳಿದದ್ದು.
ಗೋಪಾಲ ದಾಸರು ಸುಳಾದಿಯಲ್ಲಿ ಹೇಳುವದು ಆ ಅಷ್ಟ ಪುಷ್ಪಗಳು ಇರುವದು ಆ ದೇವನಲ್ಲಿ ಮಾತ್ರವೇ ಎಂದು ತಿಳಿದುಕೊಂಡು ಅರ್ಚಿಸು ಅಂತ. ಮೊದಮೊದಲು ಇದನ್ನು ಓದುತ್ತಿರುವಾಗ ಅನಿಸಿದ್ದು, ಈ ಪುಷ್ಪಗಳು ದೇವನಲ್ಲಿ ಮಾತ್ರ ಎಂದರೆ ಮನುಷ್ಯ ಮಾತ್ರರು ತಮ್ಮ ಭಾವ ಶುದ್ಧಿಗಾಗಿ ಇವುಗಳನ್ನು ಸಾಧಿಸುವದು ಸಾಧ್ಯವೇ ಇಲ್ಲವೇ ಅನಿಸತೊಡಗಿತು.
ನಂತರ ನಿಧಾನವಾಗಿ ಯೋಚಿಸಿದಾಗ ಈ ಅಷ್ಟ ಪುಷ್ಪಗಳೂ ಆ ದೇವನ ಗುಣಗಳೇ ಎಂದೂ ಮತ್ತು ಅವನ ಗುಣಗಳಿಗೂ, ಅವನಿಗೂ ವ್ಯತ್ಯಾಸವೇ ಇಲ್ಲ ಎಂಬುದನ್ನ ಈ ಸುಳಾದಿಯಲ್ಲೂ ಹೇಳುತ್ತಿದ್ದಾರೆ ಗೋಪಾಲದಾಸರು ಅನಿಸಿತು. ಸುಮಧ್ವ ವಿಜಯದ ಶ್ಲೋಕದಲ್ಲಿ ಮಧ್ವಾಚಾರ್ಯರು ಭಾವಾಷ್ಟ ಪುಷ್ಪಗಳಿಂದ ತಮ್ಮ ಅಂತರಂಗದಲ್ಲಿ ದೇವನನ್ನು ಪೂಜಿಸುತ್ತಾರೆ ಎನ್ನುವದು ಅವನ ಗುಣಗಳಿಂದಲೇ ಅವನನ್ನು ಪೂಜಿಸುವ ವಿಶಿಷ್ಟ*** ಪೂಜೆಯನ್ನು ತಿಳಿಸುತ್ತದೆಯೋ ಅನಿಸಿತು.
ಮತ್ತೆ ವೈದ್ಯರ ಹತ್ತಿರ ಮಾತಾಡುವಾಗ ಅವರು ಹೇಳಿದ್ದು, ಪೂಜೆಗೆ ಹೂವುಗಳು ಅರಳಬೇಕು. ಭಾವದಲ್ಲಿ ಈ ಹೂವುಗಳು ಅರಳಬೇಕು. ಇವುಗಳ ಅರಳುವಿಕೆ ಪೂರ್ಣ ಪ್ರಮಾಣದಲ್ಲಿ ಆಗುವದು ದೇವನಲ್ಲಿ ಮಾತ್ರ. ಜೀವರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇವು ಅರಳುವದು ಮಧ್ವಾಚಾರ್ಯರಲ್ಲಿ (ಬ್ರಹ್ಮ ವಾಯುಗಳಲ್ಲಿ).
ಮಹಾಭಾರತದಲ್ಲಿ ಭೀಮಸೇನ ದೇವರ ಪೂಜೆಯ ವೇಳೆಗೆ ಹೇಳುತ್ತಿದ್ದ ಎನ್ನುವ ಶ್ಲೋಕವೊಂದರ ಉಲ್ಲೇಖವೂ ಇದೆ ಎಂದು ಈ ಶ್ಲೋಕವನ್ನೂ ತಿಳಿಸಿದರು. ಅವರೊಡನೆ ಫೋನಿನಲ್ಲಿ ಮಾತನಾಡುವಾಗ ಇದನ್ನು ಬರೆದಿಟ್ಟುಕೊಂಡಿರಲಿಲ್ಲವಾದರೂ ಅದೇ ಶ್ಲೋಕವನ್ನು ಪ್ರಭಂಜನಾಚಾರ್ಯರೂ ಉಲ್ಲೇಖಿಸಿದ್ದರಿಂದ, ನನ್ನ ಹತ್ತಿರದ ಪುಸ್ತಕದಲ್ಲಿ ಸಿಕ್ಕಿತು.
ಆರಾಧಯಾಮಿ ಮಣಿಸನ್ನಿಭಮಾತ್ಮಬಿಂಬಂ ಮಾಯಾಪುರೇ ಹೃದಯಪಂಕಜಸನ್ನಿವಿಷ್ಟಮ್
ಶ್ರದ್ಧಾನದೀವಿಮಲಚಿತ್ತಜಲಾಭಿಷೇಕಂ ಭಾವಾಷ್ಟಪುಷ್ಪವಿಧಿನಾ ಹರಿಮರ್ಚಯಾಮಿ
ಮುಂದೆ ಮಾತನಾಡುತ್ತ ಅವರು ಇನ್ನೊಂದು ಶ್ಲೋಕ ತಿಳಿಸಿದರು. ಅದರಲ್ಲಿ ಎಂಟು ಹೂವುಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಎರಡೂ ಶ್ಲೋಕಗಳನ್ನೂ ನಾರಾಯಣ ಪಂಡಿತರೇ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು. ಆ ಎಂಟು ಪುಷ್ಪಗಳು, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ತುಷ್ಟಿ, ಸರ್ವಸಮರ್ಪಣ.
(***ವ್ಯತಿರೇಕ ಮತ್ತು ಅನ್ವಯ ಪೂಜೆಗಳ ಬಗ್ಗೆ ಜಗನ್ನಾಥ ದಾಸರು ಹರಿಕಥಾಮೃತಸಾರದಲ್ಲಿ ಹೇಳುತ್ತಾರೆ. ಬಿಡಿ ಬಿಡಿಯಾಗಿ ಉಪಕರಣಗಳಿಂದ, ಹೂವುಗಳಿಂದ, ದೇವರನ್ನು ಪೂಜಿಸುವ ವ್ಯತಿರೇಕ ಪೂಜೆ ಮತ್ತು ಎಲ್ಲದರಲ್ಲೂ ಎಲ್ಲೆಲ್ಲೂ ಅಡಕವಾಗಿರುವ ದೇವರನ್ನು ನೆನೆಯುತ್ತ, ಅವನೇ ತುಂಬಿರುವ ವಸ್ತುಗಳಿಂದ ಅವನನ್ನು ಪೂಜಿಸುವ ಅನ್ವಯ ಪೂಜೆಗಳ ಬಗ್ಗೆ ತಿಳಿಸುತ್ತಾರೆ. ಇಲ್ಲಿ ಅವನ ಗುಣಗಳಿಂದಲೇ ಅವನ ಪೂಜೆ ಮಾಡುತ್ತಾರೆ ಎಂಬುದು ಈ ಅನ್ವಯ ಪೂಜೆಯ ಮುಂದುವರೆದ ಘಟ್ಟವ? ಇದರ ಬಗ್ಗೆ ಮಾತನಾಡಬೇಕು.)

