h1

ಕೂಸು ಇದ್ದ ಮನೆಗೆ …

November 6, 2009

ಕೂಸು ಇದ್ದ ಮನೆಗೆ ಬೀಸಣಿಗೆ ಯಾಕೆ
ಕೂಸು ಕಂದಮ್ಮ ಒಳ ಹೊರಗೆ
ಕೂಸು ಕಂದಮ್ಮ ಒಳ ಹೊರಗೆ ಆಡಿದರೆ
ಬೀಸಣಿಗೆ ಗಾಳಿ ಬೀಸೀತ …

ಮಾಡದಾಗ ಇಟ್ಟಿದ್ದ ಪುಸ್ತಕ ಎಲ್ಲ ಕೆಳಗ ಹರವಿದೆಲ್ಲೋ ಪುಟ್ಟ ಅನ್ತಾ  ಒಂದು ಕಡೆ ಇಂದ ಮತ್ತೆ ಎತ್ತಿ ಇಡ್ತಾ ಬಂದರೆ ಇನ್ನೊಂದು ಕಡೆ ಇಂದ ಅವ ಹೊರಗ ಹಾಕ್ತಾ ಬರ್ತಾನೆ. ಮೂಡಿದ್ದರೆ ತಾ ತೆಗೆದದ್ದನ್ನ ತಾನೆ ಎತ್ತಿಡ್ತಾನೆ ಮತ್ತೆ ಮುಂದಿನ ಕ್ಷಣದಲ್ಲೇ‌ ಎಲ್ಲಾ ನೆಲಕ್ಕೆ  ವಾಪಸ್ ಹಾಕ್ತಾನೆ. ಇಲ್ಲೇ‌ ಇದ್ದ ಅನ್ನೋದರೊಳಗೆ ‘ವಾಕುಮ್ ವಾಕುಮ್’ ಅಂತ ತನ್ನ ಆಟಿಗೆ ವ್ಯಾಕ್ಯೂಮ್ ಕ್ಲೀನರ್ ಹಿಡಿದು ನಡೆದೇ ಬಿಡ್ತಾನೆ. ನಿಜವಾದ ವ್ಯಾಕ್ಯೂಮ್ ಕ್ಲೀನರ್ ಹೊರಗೆ ಬಂದರೆ ಅಂಜಿ ಅಲ್ಲೇ ದೂರದಲ್ಲೇ ನಿಂತಿರ್ತಾನೆ. ಪಾಟಿಯೋ ಬಾಗಿಲು, ಹೊರ ಬಾಗಿಲು ತೆಗೀತೀವಿ ಅನ್ನೋ‌ ಸೂಚನೆ ಸ್ವಲ್ಪವೇ‌ ಸಿಕ್ಕರೂ‌ ಸಾಕು ಕ್ಷಣಾರ್ಧದಲ್ಲೇ‌ ಹಾಜರ್ ಅಲ್ಲಿ. ಹಿತ್ತಲಿಗೆ ಹೊರ ಬಿದ್ದರೆ ಮಣ್ಣಾಟ, ಮುಂಬಾಗಿಲಿಂದ ಹೊರಬಿದ್ದರೆ  ‘ಕ್ವಾಕ್ ಕ್ವಾಕ್’ ಅಂತಾ ಡಕ್ ಪಾಂಡಿನ ಕಡೆಗೆ ಮುಖ.ಅಪ್ಪ ಇದ್ದರೆ ಅಪ್ಪ, ಇಲ್ಲ ಅಮ್ಮನ ಕೈ ಹಿಡಿದು ಎಳೆಕೊಂಡು ಹೋದನೇ ತನಗೆ ಬೇಕಾಗಿದ್ದ ಕಡೆ. ‘Free Electrons are like toddlers’ ಅಂತಿದ್ದರಂತ ನನ್ನ ಗೆಳೆಯನೊಬ್ಬನ ಟೀಚರ್.

ನಾಯಿ ಮರಿ ನಾಯಿ ಮರಿ ಹಾಡು ಬಂದರೆ ನಾವೂ ಬೌ ಬೌ ಅನ್ಬೇಕು, Five Little Soldirsನ್ನ ಅದರ ಜೊತೆಗೇ ಹಾಡ ಬೇಕು. ‘ಬಾರೆ ಗೋಪಮ್ಮ ನಿನ್ನ ಬಾಲಯ್ಯ ಅಳುತಾನೆ’ ಅಂದರೆ ನಗು ಮುಖ ಮಾಡಿ ಹಾಡು ಕೇಳ್ತಾನೆ. ಮಲಗೋ ಮಗನೇ ರಾತ್ರಿ ಬಹಳ ಆಯಿತು ಅಂದರೆ ಇನ್ನೂ ಹಾರಾಡ್ತಾ ಇರ್ತಾನೆ. ‘ಆನಂದ ಆನಂದ’ ಹೇಳಲೀ‌ ಅಂತ ಅಮ್ಮ ಅಂದರೆ ಅಮ್ಮನ ತೋಳ ಮೇಲೇ ತಲೆ ಇಡೊದಕ್ಕೆ ರೆಡಿ. ‘ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ’ ಅಂತ ಅಮ್ಮ ಹಾಡಿದರೆ ಅಪ್ಪನೂ ಧ್ವನಿಗೂಡಸ್ತಾನೋ‌ ಎನೋ‌ ಅಂತ ಅಪ್ಪನ ಮುಖ ನೋಡ್ತಾನೆ ತುಂಟ! ಕೆಲಸ ಅಂತ ಲ್ಯಾಪ್ಟಾಪ್ ಹಿಡಿದು ಅಪ್ಪ ಹೊರಗಿನ ರೂಮಿಗೆ ಹೊರಟರೆ ‘ಅಪ್ಪ ಆಪೀಸ್, ಅಪ್ಪ ಆಪಿಸ್’ ಅನ್ನೂದಕ್ಕೆ ಶುರು.

 

ಅಕ್ಕ-ಬುಕ್ಕ  ಅಕ್ಕ ಬುಕ್ಕ ಅಂತಿದ್ದವನ ಶಬ್ದ ಭಂಡಾರ ಬೆಳೀತಾ ಇದೆ. ಪುಟ್ಟಾ,, ಪುಟ್ಟಪ್ಪ, ಹೋಗು, ಗೋ, ಕುಕ್ಕರ್, ಅಪ್ಪಾ  ಬಂದು, ಅಮ್ಮಾ  ಬಂದು, ಹೋತ್, ಪೇನ್ (ಪ್ಲೇನ್), ಬಸ್, ಅಂಬೆಲ್ಲಾ (ಅಂಬ್ರೆಲ್ಲಾ) … ಹೊಸ ಶಬ್ದಗಳು ಹಾಗೇ ಸೇರ್ತಾನೆ ಇವೆ. ಇನ್ನೂ ಕೆಲವಷ್ಟು  ಶಬ್ದ ನಾಲಿಗೆ ತುದೀಲೇ ಇದೆ, ಇದೋ ಹೇಳೇ ಬಿಟ್ಟೆ ಅನ್ನೋ‌ ಹಾಗೆ ಮುಖ ಮಾಡ್ತಾನೆ ಆದರೆ ಹೇಳೋದಿಲ್ಲ. ಮಕ್ಕಳು ಮಾತು ಕಲಿಯೋದು, ಅವರ ಮಾತುಗಳನ್ನ ಕೇಳೋದು ನಿಜಕ್ಕೂ ರೋಮಾಂಚಕ. ಸುತ್ತಲಿನವರು ಆಡುವದನ್ನ ಕೇಳ್ತಾ ಕೇಳ್ತಾ ತಾವೂ‌ ಹಾಗೇ‌ ನುಡಿದೇ ಬಿಡ್ತಾರೆ, ತಮ್ಮ ಕಿವಿಗೇ ಕೇಳಿದ್ದು  ತಮಗೇ‌ ಇಷ್ಟವಾಗಿ (ಅಥವಾ ಸ್ಪಷ್ಟವಾಗಿ ಬರಲಿಲ್ಲ ಅಂತ ಅನಿಸಿ?)‌ ಅಂದಿದ್ದನ್ನೇ ಅಂತಾ ಹೋಗ್ತಾರೆ, ಸಂಗೀತಗಾರರು ರಿಯಾಜ್ ಮಾಡಿದಂತೆನಾ ಅದೂ?‌ ನಮ್ಮ ಕಿವಿಗಂತೂ ಸಂಗೀತವೇ!

ಹೊರಗಿನ ಕೋಣೇಲಿ ಕೂತು ಲ್ಯಾಪ್ಟಾಪಿನಲ್ಲಿ ಮಗ್ನನಾದಾಗ ಅಲ್ಲಿ ಒಳಗಿನ ರೂಮಿಂದ ‘ಅಪ್ಪ ಆಪೀಸ್’ ಅನ್ನೋದು ಕೇಳಿಸಿದಂತೆ ಅನಿಸುತ್ತದೆ, ತಕ್ಷಣ ನೆನಪಾಗುತ್ತದೆ; ನಮ್ಮ ಕೂಸು ಕಂದಮ್ಮ ಅಮ್ಮನ ಜೊತೆಗೆ ಅಜ್ಜ ಅಜ್ಜಿ  ಹತ್ತರಕ್ಕ,  ಬೆಂಗಳೂರಿಗೆ ಹೋಗಿ ಒಂದು ವಾರ ಆತು. ಹೋದ ಶನಿವಾರ ಎತ್ತಿಟ್ಟಿದ್ದ  ಅವನ ಪುಸ್ತಕ ಭಂಡಾರ ಅಲ್ಲೇ ಇದೆ, ಅವನ ಆಟಿಗೆ ಸಾಮಾನು ಅವುಗಳ ಜಗಾ ಬಿಟ್ಟು ಕದಲಿಲ್ಲ. ಮನೆ ಮನ ಎಲ್ಲ ಭಣ ಭಣ.

ನಮ್ಮ ಪುಟ್ಟಪ್ಪನ ಬಗ್ಗೆ ಇಷ್ಟೆಲ್ಲ ಬರದಿದ್ದರಿಂದ ದಿಟ್ಟಿ  ಆಗ್ತದೇನೋ‌; ದಿಟ್ಟಿ  ತಗೀಬೇಕು. “ನಾಯಿ ದೃಷ್ಟಿ, ನರೀ ದೃಷ್ಟಿ, ಅವರ ದೃಷ್ಟಿ, ಇವರ ದೃಷ್ಟಿ, ಅಪ್ಪನ ದೃಷ್ಟಿ, ಅವ್ವನ ದೃಷ್ಟಿ …. ಥೂ ಥೂ ಥೂ!”

h1

ತುಂಗಭದ್ರೆಯ ಪ್ರವಾಹದಲ್ಲಿ ಚೀಕಲಪರವಿ, ವಿಜಯದಾಸರ ಊರು …

October 25, 2009

ವಿಜಯ ದಾಸರ ಊರು ಚೀಕಲಪರವಿ, ಅಲ್ಲಿಯ ಅಶ್ವತ್ಥ ಕಟ್ಟೆ, ನರಸಿಂಹ ದೇವರು, ವಿಜಯದಾಸರ ಮನೆಗಳನ್ನ ಕೆಲವು ವರ್ಷಗಳ ಹಿಂದೆ ನೋಡಿದ್ದೆ. ವಿಜಯದಾಸರ ಮನೆಯ ಜಾಗ ಎತ್ತರದ ಮೇಲಿದೆ. ಅಲ್ಲಿಂದ ಎಷ್ಟೋ ದೂರದಲ್ಲಿದೆ ಅನಿಸಿದ್ದ ತುಂಗಭದ್ರೆ ಅವರ ಮನೆ ಮೆಟ್ಟಿಲಿಗೆ ಬಂದಿತ್ತಂತೆ. ಅಶ್ವತ್ಥ ಕಟ್ಟೆ ಯೇನು, ಆ ಅಶ್ವತ್ಥ ಮರದ ತುದಿ ಮಾತ್ರ ಹೊರಗೆ ಕಾಣುವಷ್ಟು ನೀರು ಬಂದಿತ್ತಂತೆ ಅಂತ ನನ್ನ ತಮ್ಮ ಫೋನಿನಲ್ಲಿ ಹೇಳಿದಾಗ ನಂಬಲಿಕ್ಕೇ‌ ಆಗಲಿಲ್ಲ. ಅಲ್ಲಿಯ ಪ್ರತ್ಯಕ್ಷ ಅನುಭವದ ಬರಹ ಗಿರಿ ದಾಸ ಬರೆದು ಕಳಿಸಿದ್ದನ್ನ ಓದಿದಾಗಲೇ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎನ್ನುವದು ತಿಳಿಯಿತು. ೨೦ ಆಳು ನೀರು ಮುತ್ತಿದರೆ ಪರಿಸ್ಥಿತಿ ಹೇಗಿರಬಹುದು ಅನ್ನುವದನ್ನ ಕಲ್ಪಿಸಿಕೊಳ್ಳುವದೂ ಹೆದರಿಕೆ ಹುಟ್ಟಿಸುತ್ತದೆ.

ಗಿರಿ ದಾಸ್ ಬರಹ ಇಲ್ಲಿ ಕೆಳಗಿದೆ (ಇಲ್ಲಿ ಹಾಕುವ ಬಗ್ಗೆ ತಿಳಿಸಿರುವೆ, ಅವರ ಅಭ್ಯಂತರವಿರಲಿಕ್ಕಿಲ್ಲ ಅಂದುಕೊಂಡಿರುವೆ).

———- Forwarded message ———-
From: Giri das <giri.das@….>
Date: 2009/10/16
Subject: ಹಿಂದೆಂದು ಕಂಡರಿಯದ ಆಶ್ವಿಜ ಶುದ್ಧ ದ್ವಾದಶಿ….
To: MadhwaYuvaParishat@yahoogroups.com, nilaya@yahoogroups.com

ಶ್ರೀ ವಿಜಯದಾಸರು ಹುಟ್ಟಿದ , ವಾಸಿಸಿದ ತುಂಗಭದ್ರೆಯ ತಟದಲ್ಲಿದ್ದ ಚೀಕಲಪರವಿ ಕ್ಷೇತ್ರ ಜಲಪ್ರಳಯದ ಭೀತಿ ಅನುಭವಿಸಿದ ಪ್ರತ್ಯಕ್ಷ ಅನುಭವ . (–ಶ್ರೀ ವಿಜಯದಾಸರ ವಂಶಿಕರಾದ ಶ್ರೀ ಚೀಕಲಪರವಿ ಜಗನ್ನಾಥ ದಾಸರಿಂದ ತಿಳಿದದ್ದು ) ಏಕಾದಶಿ ಸಂಜೆಯಿಂದ ತುಂಗೆ ತನ್ನ ಪ್ರವಾಹವನ್ನು ಚುರುಕು ಗೊಳಿಸಿ ,ದ್ವಾದಶಿಯಂದು ಚೀಕಲಪರವಿ ಗ್ರಾಮವನ್ನು ಸಂಪೂರ್ಣ ಜಾಲವ್ರುವುತ್ತ ಗೊಳಿಸಿ, ತನ್ನ ತಟದಲ್ಲಿದ್ದ ಶ್ರೀ ನರಸಿಂಹ ದೇವರ ಕಟ್ಟೆ ಜೊತಿಗೆ ಇಡಿ ಊರನ್ನು ಆಪೋಶನ ಮಾಡಿದಳು.

ಎಂದೆಂದೂ ಕಂಡರಿಯದ ಸುಮಾರು ಇಪ್ಪತ್ತು ಆಳು ನೀರು ನಮ್ಮ ಊರನ್ನು ಆವರಿಸಿದಾಗ ಆಗುವ ಅನುಭವ ಮಾತಿನಲ್ಲಿ ಹೇಳುವುದು ಕಷ್ಟವೇ ಸರಿ. ತುಂಗಭದ್ರೆ ಇಂದ ಕೂಗಳತೆಯ ದೂರದಲ್ಲಿ ಇದ್ದ ಚೀಕಲಪರವಿ ಸಂಪೂರ್ಣ ಜಲಾವ್ರುತ್ತವಾಗಿ ಶ್ರೀ ಅಶ್ವಥ ನರಸಿಂಹ ದೇವರ ಕಟ್ಟೆ ಮತ್ತು ಪಕ್ಕದಲ್ಲಿರುವ ಕಲ್ಯಾಣ ಮಂಟಪ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದವು.ಶ್ರೀ ವಿಜಯದಾಸರ ಮನೆ ಊರಿನ ದಿಬ್ಬದ ಮೇಲೆ ಇರುವುದರಿಂದ ಕೆಲವರು ಶ್ರೀ ವಿಜಯದಾಸರ ಮನೆಯಲ್ಲಿ (ನಮ್ಮ ಮನೆಯಲ್ಲಿ ) ಆಶ್ರಯ ಪಡೆಯಬೇಕಾಯಿತು. ದ್ವಾದಶಿ ಪ್ರತಿ ಕ್ಷಣಕ್ಕೂ ನೀರಿನ ಮಟ್ಟ ಏರುತ್ತ, ಎಲ್ಲರು ತಮ್ಮ ಜೀವವನ್ನು ಕೈಯಲ್ಲ್ಲಿ ಹಿಡಿದುಕೊಂಡು ಕುಳಿತಿರುವಾಗ ಮನೆಗಳು ಬೀಳುವುದು ಶುರುವಾಯಿತು.ಒಂದರ ಮೆಲೊಂದಂತೆ ಮಣ್ಣಿನ ಮನೆಗಳು ಹಾಗು ಕೆಲ ಗಚ್ಚಿನ ಮನೆಗಳು ಬೀಳತೊಡಗಿದವು. ನಮ್ಮ ರೈತರು ಅದಾಗಲೇ ತಮ್ಮ ಮನೆಗಳನ್ನು ತೊರೆದು ನಮ್ಮ ಮನೆಯಲ್ಲಿ ತಮ್ಮ ಜಾನುವಾರು ಹಾಗು ಕೆಲ ಸಾಮಾನುಗಳ ಸಮೇತ ಆಶ್ರಯ ಪಡೆದರು. ದ್ವಾದಶಿ ದಿನ ಮುಂಜಾನೆ ಸುಮಾರು ಎರಡು ಆಳಸ್ಟು ಇರುವ ನೀರು ರಾತ್ರಿ ಆಗುವ ಹೊತ್ತಿಗೆ ನಮ್ಮ ಮನೆಯ ಹದಿನೈದು ಮೆಟ್ಟಿಲುಗಳು ಏರಿ ಇನ್ನು ಐದು ಮೆಟ್ಟಿಲುಗಳು ಅಸ್ಟೇ ಬಾಗಿಲಿಗೆ ಬರುವುದು ಬಾಕಿ ಉಳಿದಿತ್ತು.ಆ ರಾತ್ರಿ ಕಳೆಯುವುದು ಪ್ರತಿ ನಿಮಿಷವು ಒಂದು ಯುಗವಾಗಿಬಿಟ್ಟಿತು. ನಾವು ನಿರಂತರ ದೇವರ ಭಜನೆ ಹಾಗು ಶ್ರೀ ದಾಸರ ಸ್ಮರಣೆ ಮಾಡುತ್ತಾ ರಾತ್ರಿ ಕಳೆಯುತ್ತಿದ್ದೆವು. ದಿಬ್ಬದ ಮೇಲೆ ಇರುವ ಜನರೆಲ್ಲ ಪರಸ್ಪರ ಸಂಪರ್ಕದಿಂದ ಹಾಗು ಸಹಕಾರದಿಂದ ಧೈರ್ಯ ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು .ಏಕಾದಶಿ ದಿನದಿಂದಲೇ ಮೊಬೈಲ್ ಸಂಪರ್ಕ ಕಳೆದು ಹೋಗಿದ್ದರಿಂದ ಊರು ಅಕ್ಷರಸಹ ದ್ವೀಪವಾಗಿ ಹೋಗಿತ್ತು. ಎಲ್ಲರು ಜೀವವನ್ನು ತಮ್ಮ ಕೈಯಲ್ಲಿ ಹಿಡಿದು ಶ್ರೀ ವಿಜಯರಾಯರ ಹಾಗು ಶ್ರೀ ನರಸಿಂಹ ದೇವರ ಪ್ರಾರ್ಥನೆ ಮಾಡುತ್ತಾ ಇದ್ದರು. ಊರಿನಲ್ಲಿ ಮನೆಗಳು ನಿರಂತರವಾಗಿ ಬೀಳ ತೊಡಗಿದ್ದು ಹಸುಗುಸುಗಳು, ಬಾಣನ್ತಿಯರ ಪರದಾಟ ನೋಡುವುದು ಹೃದಯ ವಿದ್ರಾವಕ ಘಟನೆ, ಯಾವೊದೋ ಒಂದು ಮನೆ ಬಿದ್ದು ಮುದುಕಿ ಸತ್ತು ಹೋಗಿದ್ದಳು, ಜನರು ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದರು,ಹುಲ್ಲಿನ ಬಣವಿಗಳು ನೀರಿನಲ್ಲಿ ಹರಿದು ಹೋಗಿ ಇದ್ದ ಜಾನುವಾರುಗಳು ಮೇವಿಗೆ ಪರಿತಪಿಸುತ್ತಿದ್ದವು. ನಾವು ಯಾವಾಗಲು ನೋಡಿದ ಸೌಮ್ಯವಾಗಿ ಹರಿಯುವ ತುಂಗೆ ಇವತ್ತು ದೊಡ್ಡ ಸಮುದ್ರದಂತೆ ತನ್ನ ಇಕ್ಕೆಲಗಳಲ್ಲಿ ಇದ್ದ ಸಮಸ್ತ ಊರುಗಳನ್ನು ಮುಳುಗಿಸಿ ಜಲ ಪ್ರಳಯದ ಭೀತಿ ಹುಟ್ಟಿಸಿ ಮುನ್ನುಗ್ಗುತಿದ್ದಳು. ನೀರು ನಮ್ಮ ಮನೆಯ ತನಕ ಅಥವಾ ಮನೆಯ ಮೇಲೆ ಬಂದರೆ ಹೇಗೆ , ಶ್ರೀ ದಾಸರಾಯರ ಅಮೂಲ್ಯ ಆಸ್ತಿಗಳಿಗೆ ಎನೂ ಆಗಬಾರದು ಎಂದು ಮೊದಲು ದೇವರ ಮನೆಯನ್ನು ಭದ್ರವಾಗಿ ಬೀಗದಿಂದ ಮುಚ್ಚಿ ಅದಕ್ಕೆ ನೀರಿನಿಂದ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದೆವು.
ಮೊದಲು ಒಂದು ತಾಸಿಗೆ ಒಂದು ಮೆಟ್ಟಿಲು ಏರುತಿದ್ದ ನೀರು ಕ್ರಮೇಣ ಒಂದುವರೆ ತಾಸಿಗೆ ಒಂದು ಮೆಟ್ಟಿಲು ಏರುವುದು ಶುರು ವಾಯಿತು. ಆಗ ಸ್ವಲ್ಪ ಬೆಳಗಾಗುವವರೆಗೆ ನೀರು ಶ್ರೀ ವಿಜಯದಾಸರ ಮನೆಯ ಒಳಗಡೆ ಬರುವುದಿಲ್ಲ ಎಂಬುದೂ ಖಾತ್ರಿ ಆಯಿತು.
ಊರಿನ ಕೆಲ ಪ್ರಮುಖರು ,ತ್ರಯೋದಶಿ ಮುಂಜಾನೆ 6-7 ಘಂಟೆಗೆ ಬೋಟೂಗಳು ಬಂದು ಎಲ್ಲ ನಿರಾಶ್ರಿತರನ್ನು ಒಣ ಪ್ರದೇಶಕ್ಕೆ ಕರೆದೋಯ್ಯುತ್ತವೆ ಎಂದು ಪ್ರಚಾರ ಮಾಡಿದರು, ಆಗ ಕೂಡ ಸ್ವಲ್ಪ ಧೈರ್ಯ ಬಂದಿತು.ಮುಂಜಾನೆ 9 ಘಂಟೆ ಸುಮಾರಿಗೆ ಎರೆಡೆರಡು ತಾಸಿಗೆ ಒಂದೊಂದು ಮೆಟ್ಟಿಲು ನೀರು ಇಳಿಯುವುದು ಜನರಲ್ಲಿ ಧ್ಯರ್ಯ ಬಂದು ಬೋಟೂಗಳು ಬರುವುದು ಸ್ವಲ್ಪ ತಡವಾದರೂ ಸಾಮಾಧಾನದ ನಿಟ್ಟುಸಿರು ಬಿಟ್ಟರು. ಕೊನೆಗೆ ಒಂದು ಗಂಟೆಗೆ ಬಂದ ಬೋಟೂಗಳು , ಆದಸ್ಟು ಜನರನ್ನು ಒಣ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಬಿಟ್ಟು ಮರುದಿನ ಮುಂಜಾನೆ ಕೂಡ ತಮ್ಮ ಕೆಲಸಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದವು. ಮೂರು ದಿನದಲ್ಲಿ , ನೀರಿನ ಪ್ರವಾಹ ಸಂಪುರ್ಣ ಇಳಿದರು, ಊರಿನಲ್ಲಿ ಸತ್ತ ಜಾನುವಾರುಗಳಿಂದ ಹೊಲಸು ವಾಸನೆ ಉಂಟಾಗಿ,ಸಾಂಕ್ರಾಮಿಕ ರೋಗದ ಭೀತಿ ಇಂದ ನಾವುಗಳು ಊರು ಬಿಡಬೇಕಾಯಿತು.ಊರಿನಲ್ಲಿ ಈಗ ಹದಿನೈದು ದಿನ ಕಳೆದರು ,ಕುಡಿಯುದಕ್ಕೆ ಸ್ವಚ್ಹ ನೀರುಇಲ್ಲ, ಕರ್ರೆಂಟಿನ ಮಾತಂತೂ ಕೇಳವೇ ಬೇಡಿ. ಶ್ರೀ ವಿಜಯ ದಾಸರ ಮನೆ, ನೀರಿನ ರಭಸಕ್ಕೆ, ತಳಗಿನ ಪಾಯದ ಮಣ್ಣೆಲ್ಲ ಕೊಚ್ಹಿ ಹೋಗಿ , ಎರಡು ಭಾಗವಾಗಿ ಸೀಳಿ ಹೋಗಿದೆ. ಇನ್ನು ನೀರಿನಿಂದ ರಕ್ಷಿಸಲು ಕಟ್ಟಿದ್ದ ಕೋಟೆ ಗೋಡೆ ಸಂಪೂರ್ಣ ವಾಗಿ ಬಿದ್ದು ಹೋಗಿದೆ.ಅದ್ರಷ್ಟವಷಾತ್, ಶ್ರೀ ವಿಜಯದಾಸರು ಪೂಜಿಸಿದ ಪ್ರತಿಮೆಗಳು ಹಾಗು ಅವರು ಕಾಶಿ ಇಂದ ತಂದ ಸಾಣೆಕಲ್ಲು ಹಾಗು ಕೆಲ ಅಪರೂಪದ ಪುಸ್ತಕಗಳನ್ನು ಯಾವುದೇ ಧಕ್ಕೆಯಾಗದಂತೆ ದೇವರು ಕಾಪಾಡಿದ್ದಾನೆ. ಊರಿನಲ್ಲಿ ಹಾಗು ಶ್ರೀ ವಿಜಯ ದಾಸರ ಮನೆ (ನಮ್ಮ ಮನೆ)ಯಲ್ಲಿ ಯಾವಾಗಲೋ ಕಟ್ಟಿದ್ದ ಹಗೆಗಳು ಬಿರುಕು ಬಿಟ್ಟು ಕಂದಕಗಳು ಉಂಟಾಗಿವೆ. ತೀವ್ರ ಮಣ್ಣಿನ ಕೊರೆತದಿಂದ ಇಡಿ ಮನೆಯು landslide ನಿಂದ ಬಿದ್ದು ಹೋಗಬಹುದಾದ ಆತಂಕ ಮನೆ ಮಾಡಿದೆ. ಆದರೆ ಬರುವ ವಿಜಯದಾಸರ ಆರಾಧನೆಗೆ ಯಾವುದೇ ಆತಂಕವಿಲ್ಲದೆ ಭಕ್ತರು ಚೀಕಲಪರವಿಗೆ ಬಂದು ಆರಾಧನೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ.ಯಂದಿನಂತೆ ಶ್ರೀ ದಾಸರಾಯರ ಆರಾಧನೆಯನ್ನು ಅತ್ಯಂತ ವೈಭವದಿಂದ ಆಚರಿಸಲು ಸಜ್ಜಾಗಿದ್ದೇವೆ.
-malegiri Das

h1

ಕೇಳುವದರೊಳಗೆ ಕಳೆದೆಯಲ್ಲ ದಿನ …

October 19, 2009

ರಾಯಚೂರು ಶೇಷಗಿರಿ ದಾಸ್ ಹಾಡುಗಾರಿಕೆಯಲ್ಲಿ ಕೇಳಿದ ಗೋವಿಂದ ದಾಸರ ಪದ.

ಕೇಳುವದರೊಳಗೆ ಕಳೆದೆಯಲ್ಲ ದಿನ
ಮಾಡುವದೆಂದು ಹೇಳಲೆ ಮನವೆ

ಮನನ ಮಾಡಿ ಮಾಧವನ ಮಹಿಮೆಯ
ಅನುಭವಕೆ ತಾರದೆ ಈ ಪರಿಯಲ್ಲಿ ನೀ ಬರಿ …

ಪರರ ಹರಟೆಗೆ ಪರವಶನಾಗುತ
ನಿರುತ ಈ ಪರಿ ಕಾಲ ಕಳೆವೆ ಮರಳಿ
ಹರಿ ಸ್ಮರಿಸಿರೆಂದು ಡಂಗುರ ಹೊಯ್ಯುವ
ಗುರು ಹಿರಿಯರ ನುಡಿಗಳನೆ …

ಹೆಣ್ಣು ಮಣ್ಣು ಹಣವನ್ನು ನಂ-
ಬಿ ನೀ ಕೆಡದಿರೆಲೊ ಎಂದೆನುತ
ಚನ್ನಾಗಿ ಸರ್ವತ್ರ ಕೇಳಿ ನೀ
ಮುನ್ನಿನಂತೆ ಆಚರಿಸುತ್ತಿರುವೆಯಾ

ಜ್ಞಾನವಿಟ್ಟು ಪವಮಾನ ವಂದಿತನ
ಗಾನ ಮಾಡು ಶ್ರೀ ಹರಿ ಗುಣವ
ಮನದ ಸಿರಿ ಗೋವಿಂದ ವಿಠ್ಠಲಗೆ
ಹೀನ ಲೇಸುಗಳ ಅರ್ಪಿಸು ಮರೆಯದೆ

h1

ನಕ್ಷತ್ರ ಭೂಷಣ …

September 23, 2009

ಮೊನ್ನೆ ನನ್ನಪ್ಪ ಈ ಶಿವಸ್ತುತಿಯನ್ನ ಟೈಪ್ ಮಾಡಿ ಕಳಿಸಿದ್ರು. ಕಾಖಂಡಕಿ ಕೃಷ್ಣದಾಸರು ಈ ಕೃತಿಯಲ್ಲಿ ನಕ್ಷತ್ರಗಳ ಹೆಸರುಗಳನ್ನ ಬಳಸಿಕೊಂಡು ಶಿವನನ್ನ ಸ್ತುತಿಸುತ್ತಾರೆ. ನಕ್ಷತ್ರಗಳ ಹೆಸರನ್ನ ಸೂಚ್ಯವಾಗಿ ತಿಳಿಸುತ್ತಾರಷ್ಟೆ ಹೊರತು ನೇರವಾಗಿ ಹೆಸರನ್ನೇ ಹೇಳಿಬಿಡುವದಿಲ್ಲ.

ನಕ್ಷತ್ರ ರಮಣನಯ್ಯನಿಗೊಲಿದು ಶರವನಿತ್ತೆ
ನಕ್ಷತ್ರದೊಲ್ಲಭನ ತಮ್ಮನ ಸುತನ ಸುಟ್ಟೆ
ನಕ್ಷತ್ರ ಇಲ್ಲದವನ ವೈರಿಗಮನನ ತಾತ
ನಕ್ಷತ್ರ ಕಾಂತ ಧರನೆ||
ನಕ್ಷತ್ರಜಾತನಗ್ರಜನ ಮಸ್ತಕವ ತರಿದೆ
ನಕ್ಷತ್ರ ಸಹಸ್ರ ಉಳ್ಳವನ ದ್ವಾರವನ್ನು ಕಾಯ್ದೆ
ನಕ್ಷತ್ರ ನೀನೇ ಇಂದ್ರಾದಿ ದೇವತೆಗಳಿಗೆ ಗುರುಮಹಿಪತಿಸ್ವಾಮಿ
ನಕ್ಷತ್ರ ಭೂಷಣ ಸಲಹೂ||

ನನ್ನಪ್ಪ ಇದರಲ್ಲಿನ ನಕ್ಷತ್ರಗಳ ಹೆಸರನ್ನು ಇಲ್ಲಿ ಉಲ್ಲೇಖಿಸಿರುವ  ಕ್ರಮದಲ್ಲೇ ಬರೆದು ಕಳಿಸಿದ್ರು.  ಆದರೆ ನಾನೀಗ ಕ್ರಮ ತಪ್ಪಿಸಿ ಕೊಡ್ತಾ ಇದ್ದೇನೆ, ನೋಡಿ ನಿಮಗೆ ಯಾವದು ಯಾವ ಸಾಲಿಗೆ ಅಂತ ಗೊತ್ತಾಗುತ್ತಾ ಅಂತ :) .

ಚಂದ್ರ, ಉತ್ತರ, ಆಶ್ಲೇಷ, ರೋಹಿಣಿ, ಜೇಷ್ಠ, ಶ್ರವಣ, ಚಿತ್ತ, ಹಸ್ತಾ

ಕೊ.: ನಕ್ಷತ್ರಗಳ ಸಾಲಿನಲ್ಲಿ ಚಂದ್ರ ಯಾಕೆ ಬಂದ ಅಂತಿರ? ‘ನಕ್ಷತ್ರಾಣಾಮ ಶಶಿ’ ಅಂತಾನೆ ಕೃಷ್ಣ  ಗೀತೆಯಲ್ಲಿ. ಚಂದ್ರ ನಕ್ಷತ್ರಗಳಿಗೆ ಒಡೆಯನಂತೆ.

h1

ಶ್ರವಣ

September 20, 2009

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ|
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ||

ನವವಿಧ ಭಕ್ತಿಗಳನ್ನ ಹೇಳುವ ಈ‌ ಶ್ಲೋಕವನ್ನ ಹಿರಿಯರೊಬ್ಬರು ಬಹಳ ಹಿಂದೆ ಬರೆದುಕೊಟ್ಟಿದ್ದರು. ಇದರ ಜೊತೆಗೆ ಪ್ರತಿಯೊಂದು ವಿಧದ ಭಕ್ತಿಗೂ ಹೆಸರಾದ ಒಬ್ಬೊಬ್ಬರ ಹೆಸರನ್ನೂ‌  ಬರೆದುಕೊಟ್ಟಿದ್ದರು. ನನ್ನ ಒಂದೂವರೆ ವರ್ಷದ ಮಗನ ಕೈಗೆ ನಿಲುಕುವಂತೆ ಇಟ್ಟಿದ್ದ ಪುಸ್ತಕಗಳ ಕಡೆ ಅವನ ಆಸಕ್ತಿ ಹೆಚ್ಚಾಗಿ, ಪುಸ್ಕ್ತಕಗಳ ಕಟ್ಟು  ಸಡಿಲವಾಗತೊಡಗಿದ್ದರಿಂದ ಅವಕ್ಕೆಲ್ಲ ಇನ್ನೊಂದು ಎತ್ತರದ ಸ್ಥಳದಲ್ಲಿ ಜಾಗ ಮಾಡುವಾಗ ಆ ಹಿರಿಯರು ಬರೆದು ಕೊಟ್ಟಿದ್ದ ಚೀಟಿ ಸಿಕ್ಕಿತು. ಹೇಗಿದ್ದರೂ ನವರಾತ್ರಿ ಆರಂಭವಾಗಿದೆ, ಈಗಾಗಲೇ ಎರಡು ದಿನಗಳು ಆಗಿ ಹೋಗಿದ್ದರೂ ಇವತ್ತು ಶ್ರವಣವನ್ನಾದರೂ‌ ಉಲ್ಲೇಖಿಸಬೇಕು ಅನಿಸಿತು.

ಒಂದು ವಾರದ ಜೀವನ ಮಾತ್ರ ಬಾಕಿ ಇರುವದು ಎಂದು ತಿಳಿದಾಗ ಉಳಿದ ಆಯುಷ್ಯವನ್ನ ವ್ಯರ್ಥ ಕಳೆಯದೆ ದೇವರ ಗುಣ ಕಥನವನ್ನ ಕೇಳುತ್ತ ಕಳೆಯಬೇಕು ಎಂದು ನಿರ್ಧರಿಸಿ ಅದರಂತೆ ಗಂಗಾ ತಟದಲ್ಲಿ ಶುಕ ಮುನಿಯಿಂದ ನಿರಂತರ ಪ್ರವಚನ ಕೇಳಿದ ಪರೀಕ್ಷಿತ ರಾಜನೇ ಹರಿ ಕಥಾ ಶ್ರವಣಕ್ಕೆ  ಹೆಸರಾದವನು. ಸಾವು ಬರುವದು ಅಂತ ಅಳಲಿಲ್ಲ, ರಾಜನಾದ ನನಗೇ ಶಾಪವೇ ಅಂತ ಸಿಟ್ಟಿಗೇಳಲಿಲ್ಲ, ಇದ್ದ ಸಮಯವನ್ನ ಸಾರ್ಥಕವಾಗಿ ಕಳೆಯುವದು ಹೇಗೆ ಎನ್ನುವದರ ಕಡೆಗೆ ಮಾತ್ರ ಗಮನ ಹರಿಸಿದ. ಅವನ ಹೆಸರೇ ಪರೀಕ್ಷಿತ, ಹುಟ್ಟುವಾಗಲೇ ಎಲ್ಲವನ್ನೂ‌ ಬೆರಗುಗಣ್ಣಿನಿಂದ ಪರೀಕ್ಷೆ ಮಾಡುವಂತೆ ನೋಡುತ್ತಿದ್ದನಂತೆ, ಅದಕ್ಕಾಗೇ ಪರೀಕ್ಷಿತ ಅಂತ ಹೆಸರಾಯಿತಂತೆ. ಗರ್ಭದಲ್ಲಿದ್ದಾಗಲೇ ಅಶ್ವತ್ಥಾಮನ ಬ್ರಹ್ಮಾಸ್ತ್ರಕ್ಕೆ ಗುರಿಯಾಗಿ ಕೃಷ್ಣನಿಂದ ಉಳಿದಾತ, ಕಡೆಗಾಲಕ್ಕೆ ಆ ಕೃಷ್ಣನ ಕಥೆಯನ್ನೇ ಕೇಳಿ ಆನಂದಿಸಿದಾತ.

ಶ್ರವಣದ ಬಗ್ಗೆ ಜಗನ್ನಾಥ ದಾಸರು ಹರಿಕಥಾಮೃತ ಸಾರದ ೨ನೇ ಸಂಧಿ (ಕರುಣಾ ಸಂಧಿ) ಯಲ್ಲಿ ಹೀಗೇ‌ ಹೇಳುತ್ತಾರೆ,

ಶ್ರವಣ ಮನಕಾನಂದವೀಹುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು||
ಭುವನ ಪಾವನನೆನಿಪ ಲಕುಮೀ
ಧವನ ಮಂಗಳ ಕಥೆಯ ಪರಮೋ
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನ ದಿನದಿ||

ವಿಜಯ ದಾಸರ ‘ಪವಮಾನ ಪವಮಾನ ಜಗದ ಪ್ರಾಣ’ ಹಾಡಿನಲ್ಲಿ ಹನುಮಂತನನ್ನ ಶ್ರವಣ ಮೊದಲಾದ ನವ ವಿಧ ಭಕ್ತಿಗಳನ್ನ ತವಕದಿಂದ ಕೊಡು ಎಂದು ಕೇಳುತ್ತಾರೆ. ಕೇಳುವವರಿಗೆ ಯಾವಾಗ ದೊರಕೀತು ಎನ್ನುವ ತವಕ ಇರುವದೇನೂ ಆಶ್ಚರ್ಯವಲ್ಲ, ಆದರೆ ಇಲ್ಲಿ ದಾಸರು ಆ ಪವಮಾನನಿಗೆ ತವಕದಿಂದ ಕೋಡು, ಬೇಗ ಕೋಡು ಅಂತ ಕೇಳ್ತಾ ಇದ್ದಾರೆ. ನನ್ನಮ್ಮನ ಬಾಯಲ್ಲಿ ಈ‌ ಹಾಡನ್ನ ಬಹಳಷ್ಟು  ಬಾರಿ ಕೇಳಿದ್ದೇನೆ. ಇಲ್ಲಿ ಈ‌ ಹಾಡಿನ ಸಾಹಿತ್ಯ ಇದೆ ಮತ್ತು ಯೂ ಟ್ಯೂಬಿನ ಲಿಂಕ್ ಕೂಡ ಇದೆ.

h1

Shahrukh Khan and a short story

September 14, 2009

Many years ago I read a kannada short story, probably in the Sudha Ugadi Vishesanka. It was about a young boy who realizes he could change his face to any other face just by thinking about that and touching his face at few places.  He stumbles upon this skill while trying to act like a mimicry artist he had seen at school. Next day he goes to his teachers and shows them the new skill, shows it to his friends. Every one is thrilled that he can change his face to be like that of Gandhi, Nehru, their Head Master, just about any one they can ask him to be. He hones the skill and becomes very popular all over the country over the years. After many many years his School wants to host his show again. By then he has used his skill so much that he doesn’t even need to touch his face to become like some one else. He just has to think about a face and his face changes. While that’s great for his profession, it is causing him a lot of trouble. He can look like any random person on the street but he cannot look like himself!

I don’t remember the name of the Author or even the name of the story. Remembered that story again last week end while listening to this interview of Shahrukh Khan.  He says he cannot recognize himself now when the camera is not on, some times even when it is on. He talks about how he feels that a part of himself is lost in every role he does. One day, he says, he may loose every thing and stop acting! Check out this youtube video starting at 1:35.

[PS: In case any of you know the Kannada short story's name, author's name, please let me know]

h1

ಒಂಟಿ, ಮರ

September 12, 2009

Lone Cypress

ಭುವಿ  ತಿರುಗಿ
ದಿನ  ಕರಗುವಾಗ
ಪಡುವಣದ ಕಡಲು,
ಮುಗಿಲು  ಕಲೆಯುವಲ್ಲಿ
ರವಿ  ತೂರಿದ  ಬಣ್ಣ
ಕಡಲಲ್ಲಿ  ಮುಗಿಲಲ್ಲಿ
ದಂಡೆಯಲ್ಲೂ   ಚೆಲ್ಲಿದಾಗ
ಹೊಂಬಣ್ಣದಿ  ಮಿಂದ
ಬಂಡೆ  ಮೇಲೆ
ಒಂಟಿ ಮರ

ಮುಳುಗು ಸೂರ್ಯನ ಬೆಳಕು
ರಂಗೊಡೆದು
ಓಕುಳಿಯಾಗಿ
ಬಾನು ಭುವಿಯಲ್ಲಿ
ಕಡಲ  ಅಲೆಗಳಲ್ಲಿ   ಕಣ್ಣಲ್ಲಿ
ಪ್ರತಿಫಲಿಸಿ
ಮನ  ತೊಯ್ಯುವಾಗ
ನಾನು

h1

ಕೆಂಪೇರಿತಂಬರದಿ

September 4, 2009

ಈಗೊಂದೆರಡು ದಿವಸಗಳಿಂದ ರಾಯಚೂರು ಶೇಷಗಿರಿ ದಾಸ ಹಾಡಿರುವ ಈ‌ ಹಾಡಿನ ಗುಂಗು ಹಿಡಿದಿದೆ. ಇವತ್ತು ರಾತ್ರಿ ಯಾಕೋ‌ ನಿದ್ದೆಯೂ ಬರ್ತಿಲ್ಲ. ಇರಲಿ ಅಂತ ಕೇಳಿದ್ದನ್ನ ಟೈಪ್ ಮಾಡಿ ಪೋಸ್ಟ್ ಮಾಡ್ತಾ ಇದ್ದೇನೆ. ಈ ಹಾಡಿನ ಕೊನೆಯ ನುಡಿಯಲ್ಲಿರುವ ‘ಶ್ರೀ ಕೃಷ್ಣ’ ಅಂಕಿತ ನೋಡಿದರೆ ಇದು ವ್ಯಾಸರಾಜರದ್ದಿರಬೇಕೇನೋ ಅನಿಸಿದೆ. ಆದರೆ ಶ್ರೀ ಕೃಷ್ಣಕ್ಕೂ ಮುಂಚೆ ಬರುವ ಆನಂದ ವಿಠಲ ಅನ್ನುವದನ್ನ ನೋಡಿದಾಗ ಬೇರೆ ಯಾರದ್ದಾದರೂ ಇರಬಹುದೇನೋ‌ ಅಂತ ಕೂಡ ಅನಿಸಿದೆ. (ಆನಂದ ವಿಠಲ ಅಂಕಿತದಿಂದ ಪದ ರಚಿಸಿದ ದಾಸರು ಯಾರಾದರೂ ಇದ್ದರೆ ಅಂತ ನನಗೆ ಗೊತ್ತಿಲ್ಲ. ಇರುವ ಪುಸ್ತಕಗಳಲ್ಲಿ ಹುಡುಕಿದಾಗ ಸಿಗಲಿಲ್ಲ. ಹೀಗಾಗಿ ‘ಶ್ರೀ ಕೃಷ್ಣ’ ವೇ ಇದರಲ್ಲಿರುವ ಅಂಕಿತ ಮತ್ತು ಈ‌ ಪದ ವ್ಯಾಸರಾಜರದ್ದೇ ಇರಬೇಕು ಅನಿಸಿದೆ. ವ್ಯಾಸರಾಜರದ್ದೇ‌ ಆಗಿದ್ದರೆ ಈ‌ ಪದರಚನೆಯ ಸಂದರ್ಭ ಯಾವುದಿದ್ದರಬಹುದು ಎನ್ನುವ ಕುತೂಹಲವೂ ಶುರುವಾಗಿದೆ. ಯಾರಿಗಾದರೂ ಈ‌ ಪದದ ಬಗ್ಗೆ ಹೆಚ್ಚಿನ ವಿಷಯ ತಿಳಿದಿದ್ದರೆ ದಯವಿಟ್ಟು ತಿಳಿಸಿ.)

ಆನಂದ ವಿಠಲ ದಾಸರ ಬಗ್ಗೆ dvaita.org ನ ಈ ಪುಟದಲ್ಲಿ ಒಂದಷ್ಟು ಮಾಹಿತಿ ದೊರಕಿತು. ಇವರು ಲಿಂಗಸುಗೂರಿನವರಂತೆ. ಇವರ ಹೆಸರು ಕುಲಕರ್ಣಿ ರಾಮ ರಾವ್ ಮತ್ತು ಇವರ ಕಾಲ ೧೮೬೯-೧೯೧೮. ಶ್ರೀ ಗುರು ಜಗನ್ನಾಥ ದಾಸರಿಂದ ಇವರಿಗೆ ದಾಸ ದೀಕ್ಷೆಯಾದದ್ದು. ಇವರ ಬಗ್ಗೆ, ಇವರ ಪದಗಳ ಬಗ್ಗೆ ಇನ್ನಷ್ಟು ಅರಿಯಬೇಕು ಅನಿಸಿದೆ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ಕೆಂಪೇರಿತಂಬರದಿ ತಂಪಿಳಿತು* ಸಂಭ್ರಮದಿ
ಕಂಪನಾಗಿದೆ ಚಿತ್ತ ಕಾಯೋ ಕೃಷ್ಣಾ

ಶಶಿ ಮುಖಿ ವಿತ್ತಾಸೆ ಹೇಸಿ ಜೀವನದಾಸೆ
ಮೋಸ ಮಾಡದೆ ಎನ್ನ ಕಾಯೋ ಕೃಷ್ಣಾ
ಪಶುಪತಿ ಸಖ ನಿನ್ನ ಹಸನಾಗಿ ಭಜಿಪಾಸೆ
ವಸುಧೆಯೊಳು ಎನಗಿತ್ತು ಕಾಯೋ‌ ಕೃಷ್ಣಾ

ಊರೊಳಗೆ ವ್ಯಾಪಿಸಿಹ ಘೋರಾಂಧಕಾರವನು
ಪಾರುಗಾಣಿಸಿ ಎನ್ನ ಕಾಯೋ ಕೃಷ್ಣಾ
ಮೇರು ಬೆನ್ನಲಿ ಹೊತ್ತ ಸರಸಿಜೋದ್ಭವ ಜನಕ
ಭಾರವೇ ನಾ ನಿನಗೆ ಕಾಯೋ‌ ಕೃಷ್ಣಾ

ಅನ್ನ ವ್ಯಸನಕ್ಕಾಗಿ ಅನುದಿನವು ಯಾಚಿಸುತ
ಅನ್ಯರಾ ಮನೆ ದ್ವಾರ ಕಾಯ್ದೆ ಕೃಷ್ಣಾ
ದೀನ ರಕ್ಷಕ ನಿನ್ನ ತೋಂಡರೊಳಿರಿಸಯ್ಯ
ದಾನವಾಂತಕಾನಂದ ವಿಠಲ ಶ್ರೀ ಕೃಷ್ಣಾ

ತಂಪಿಳಿತು* – ಈ‌ ಶಬ್ದ ಸರಿಯಾಗಿ ಕೇಳಿಸಿಕೊಂಡೆನಾ ಅಂತ ಅನುಮಾನವೂ ಇದೆ!

h1

ತೇರಾನೇರಿ ತೇರಾನೇರಿ …

August 20, 2009

ಶ್ರಾವಣ ಮಾಸ ಕೃಷ್ಣ ಪಕ್ಷದ ದ್ವಿತಿಯಾ ದಿವಸ ಮಂತ್ರಾಲಯ ಪ್ರಭು ಶ್ರೀ ರಾಘವೇಂದ್ರರ ಆರಾಧನೆ. ಇಲ್ಲೆ ಲಿವರ್ಮೋರ್ ಗುಡಿ ಒಳಗ ಎಸ್ವಿಬಿಎಮ್ ಆಯೋಜಿಸಿದ್ದ ಆರಾಧನಾ ಕಾರ್ಯಕ್ರಮಕ್ಕೆ ಹೋಗಿದ್ವಿ. ಅಲ್ಲಿ ರೆಕೊರ್ಡ್ ಮಾಡಿದ ರಥೋತ್ಸವ. ಒಂದಷ್ಟು ಛೋಲೊ ದಾಸರ ಹಾಡಿನ ಭಜನಿ ಮಾಡಿದ್ರು. ನಾನು ಅದನ್ನೊಂದಿಷ್ಟು ರೆಕಾರ್ಡ್ ಮಾಡಿ ಯೂ ಟ್ಯೂಬಿಗೆ ಏರಿಸಿದೆ. ಇಕಾ ಇಲ್ಲೆ ಲಿಂಕ್ ಅವ ನೋಡ್ರಿ.

h1

ಮನ ನಿನ್ನಲಿ ನಿಲಿಸೋ ಮಾಧವ…

August 13, 2009

ಕೆಲವು ಹಾಡುಗಳು, ಶ್ಲೋಕಗಳೇ ಹಾಗೆ, ಅವನ್ನು ಕಂಡವರು, ಬರೆದವರು ತಾವು ಕಂಡದ್ದನ್ನ ಕಂಡ ಹಾಗೆ ಹೇಳುತ್ತ ಹೋದಂತೆ, ಅದನ್ನ ಕೇಳುತ್ತಿದ್ದರೆ ಅದೆಲ್ಲ ನಮಗೂ‌ ಕಾಣಿಸಿಯೇ ಬಿಡುವದು ಅನಿಸುವಂತೆ. ಪುರಂದರ ದಾಸರ ‘ಶರಣು ಸಕಲೋದ್ಧಾರ’ ಎಷ್ಟು ಬಾರಿ ಕೇಳಿದ್ದೇನೆ ನಮ್ಮಮ್ಮನ ಬಾಯಲ್ಲಿ. ಪ್ರತೀ ಬಾರಿಯೂ ಖುಷಿ ಕೊಡುತ್ತದೆ.

ಈ ತಮ್ಮ ಈ ಸೀತೆ ಈ ಬಂಟ ಈ‌ ಭಾಗ್ಯ
ಆವ ದೇವರಿಗುಂಟು ಬ್ರಹ್ಮಾಂಡದೊಳಗೆ

ಎನ್ನುವ ಸಾಲುಗಳಂತೂ‌ ದಾಸರು ಹಾಗೆ ಕಣ್ಮುಂದೆ ಕಾಣುತ್ತಲೇ ಹೇಳಿದಂತನಿಸುತ್ತವೆ. ಅದೇ ರೀತಿ, ರಾಮ ರಕ್ಷಾ ಸ್ತೋತ್ರದಲ್ಲಿ ಬರುವ

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತೀರ್ಯಸ್ಯ ತಮ್ ವಂದೇ ರಘುನಂದನಮ್

ಶ್ಲೋಕವೂ ಕೂಡ ಸೀತೆ ಲಕ್ಷ್ಮಣರನ್ನ ಎಡ ಬಲದಲ್ಲೂ, ಹನುಮಂತನನ್ನು ತನ್ನ ಮುಂದೆಯೂ ಹೊಂದಿದ ರಾಮ ಮನಃಪಟಲದ ಮೇಲೆ ಮೂಡಿಸುವಂತಿದೆ. ಎಷ್ಟು ಚಿತ್ರಪಟಗಳಲ್ಲಿ ನೋಡಿಲ್ಲ, ಎಷ್ಟು ಗುಡಿಗಳಲ್ಲಿ ಮೂರ್ತಿಗಳಾಗಿ ನೋಡಿಲ್ಲ ರಾಮ,ಸೀತಾ, ಲಕ್ಷ್ಮಣ ಹನುಮಂತರನ್ನ ಹಾಗೆ. ಆ ಎಲ್ಲ ಚಿತ್ರಗಳಿಗೂ, ಮೂರ್ತಿಗಳಿಗೂ‌ ಈ‌ ಶ್ಲೋಕವೇ ಸ್ಫೂರ್ತಿಯೇನೋ.

ಜಗನ್ನಾಥ ದಾಸರು ಹರಿಕಥಾಮೃತಸಾರದ ಕೊನೆಯ ಸಂಧಿಯಲ್ಲಿ ಹರಿಯನ್ನ ಹೆಗಲ ಮೇಲೆ ಹೊತ್ತು, ಆ ಹರಿಯ ಪಾದಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಗರುಡನ ಚಿತ್ರ ಕಣ್ಮುಂದೆ ತರುತ್ತಾರೆ. ಮಡಿಚಿದ ಬೆರಳುಗಳ ಉಗುರುಗಳ ಸಾಲಿನಲ್ಲಿ ತನ್ನ ಹೆಗಲಲ್ಲಿ ಕುಳಿತ ಹರಿಯ ಪ್ರತಿಬಿಂಬ ನೋಡುತ್ತ ಸುಖಿಸುವ ಗರುಡ ಸುಜನರಿಗೆ ಮಂಗಳವನ್ನು ಕೊಡಲಿ ಅಂತ ಪ್ರಾರ್ಥಿಸುತ್ತಾರೆ.

ಜಗದುದರನ ಸುರೋತ್ತಮನ ನಿಜ
ಪೆಗಲೊಳಾಂತು ಕರಾಬ್ಜದೊಳು ಪದ
ಯುಗ ಧರಿಸಿ ನಖ ಪಂಕ್ತಿಯೊಳು ರಮಣೀಯ ತರವಾದ
ನಗಧರನ ಪ್ರತಿಬಿಂಬ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುವ
ಖಗ ಕುಲಾಧಿಪ ಕೊಡಲಿ ಮಂಗಳ ಸಕಲ ಸುಜನರಿಗೆ

ಇಂಥ ಸೊಗಸಾದ ಪದಗಳನ್ನೂ, ಸ್ತೋತ್ರಗಳನ್ನೂ‌ ವಿದ್ಯಾಭೂಷಣರ ಹಾಡುಗಾರಿಕೆಯಲ್ಲಿ ಕೇಳಿದಾಗ ಮತ್ತಷ್ಟು ಆನಂದವಾಗುತ್ತದೆ. ಪುರಂದರ ದಾಸರ ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ಎನ್ನುವ ಹಾಡಲ್ಲಂತೂ ಎಡ ಬಲದಲ್ಲಿ ಓಲಾಡುವ ಕೌಸ್ತುಭ ಸಹಿತ ಆ ಕೃಷ್ಣನನ್ನ ನಮ್ಮ ಮುಂದೆ ನಿಲ್ಲಿಸಿಯೇ‌ ಬಿಟ್ಟರೇನೋ‌ ಅನಿಸುತ್ತದೆ. ಮನಸ್ಸು ಪಕ್ವವಾಗಿದ್ದರೆ ಆ ಮಘ ಮಘಿಸುವ ಸುಳಿಗುರುಳಿನ ಸೊಬಗನ್ನೂ , ಚಿಗುರು ತುಲಸಿ ವನಮಾಲೆಯ ಸುವಾಸನೆಯ ಅನುಭವವನ್ನೂ ಕಟ್ಟಿ ಕೊಡುವದೇನೋ! ಇಂಥ ಹಾಡುಗಳು, ಸ್ತೋತ್ರಗಳು ಮನಸ್ಸಿನಲ್ಲಿ ಉಳಿದಂತೆ ಆ ಕೃಷ್ಣನೂ‌ ಮನಸ್ಸಿನಲ್ಲಿ ನೆಲೆಸಲಿ, ಆ ಮಾಧವ ಮನವನ್ನ ತನ್ನಲ್ಲಿ ನಿಲ್ಲಿಸುವಂತಾಗಲಿ ಎನ್ನುವ ಹಾರೈಕೆಯೊಂದಿಗೆ, ಕೃಷ್ಣಾಷ್ಟಮಿಯ ಶುಭಾಶಯಗಳು.

ಮ್ಯೂಸಿಕ್ ಇಂಡಿಯಾ ಆನ್ಲೈನಿನಲ್ಲಿ ವಿದ್ಯಾಭೂಷಣರ ಹಾಡು ಕೇಳಬಹುದು.

ಕೃಷ್ಣ ಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
ಕಷ್ಟಗಳೆಲ್ಲವ ಪರಿಹರಿಸಿ ಮನದಿಷ್ಟಾರ್ಥಗಳನೆಲ್ಲ ಕೊಟ್ಟು ರಕ್ಷಿಸುವಂಥ

ಮಸ್ತಕದಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿ ಹೊಳೆವ ಲಲಾಟ
ಶಿಸ್ತಿಲಿ ಕೊಳಲ ಊದುವ ಓರೆ ನೋಟ
ಕೌಸ್ತುಭ ಎಡ ಬಲದಲಿ ಓಲ್ಯಾಟ

ಮಘ ಮಘಸುವ ಸೊಬಗಿನ ಸುಳಿಗುರುಳು
ಚಿಗುರು ತುಲಸಿ ವನಮಾಲೆಯ ಕೊರಳು
ಬಗೆ ಬಗೆ ಹೊನ್ನ ಮುದ್ರಿಕೆ ಇಟ್ಟ ಬೆರಳು
ಸೊಬಗಿನ ನಾಭಿಯ ತಾವರೆ ಅರಳು

ಉಡುದಾರ ಒಡ್ಯಾಣ ಸಕಲಾಭರಣ
ಬೆಡಗು ಪೀತಾಂಬರ ಶತ ರವಿ ಕಿರಣ
ಕಡಗ ಗಗ್ಗರಿ ಪೆಂಡೆಗಳನಿಟ್ಟ ಚರಣ
ಒಡೆಯ ಪುರಂದರ ವಿಠಲನ ಕರುಣ

(‘ಮನ ನಿನ್ನಲಿ ನಿಲಿಸೋ ಮಾಧವ’ ಎನ್ನುವದು ‘ಅನಾದಿ ಕಾಲದ ಋಣಾನುಬಂಧ’ ಎಂದು ಶುರುವಾಗುವ ಒಂದು ದಾಸರ ಪದದ ಪಲ್ಲವಿಯ ಸಾಲು. ನನ್ನಮ್ಮನ ಫೇವರೇಟುಗಳಲ್ಲೊಂದು. ಇದರ ಬಗ್ಗೆ ಇನ್ಯಾವಾಗಲಾದರೂ ಬರೆಯಬೇಕು).